ಮಕ್ಕಾ.ಆ,14: 2019 ನೇ ಸಾಲಿನ ಹಜ್ ಕರ್ಮವು ಆ,9 ರಂದು ಆರಂಭಿಸಿ ಇಂದು ಸಮಾಪ್ತಿಗೊಂಡಿದೆ. ವಿದಾಇನ ತ್ವವಾಫ್ ನೊಂದಿಗೆ ಹಜ್ ಯಾತ್ರಿಕರು ಸ್ವದೇಶಕ್ಕೆ ಮರಳಲಿದ್ದು,ರೌಳಾ ಝಿಯಾರತ್ ಕೈಗೊಳ್ಳದವರು ಮದೀನಾ ಕಡೆ ಯಾತ್ರೆ ಹೊರಡಲಿದ್ದಾರೆ.ಈ ಬಾರಿ ಹಜ್ಜ್ಗಾಗಿ ಜಗತ್ತಿನ ವಿವಿಧ ದಿಕ್ಕಿನಿಂದ ಸುಮಾರು 22 ಲಕ್ಷಕ್ಕೂ ಮಿಕ್ಕ ಯಾತ್ರಿಕರು ಆಗಮಿಸಿದ್ದರು.ಇಷ್ಟೊಂದು ಹಜ್ ಯಾತ್ರಿಕರ ಸೇವೆಗಾಗಿ ಸ್ವಯಂ ಸೇವಕರ ತಂಡ ಬಹಳ ಮುಖ್ಯ.
ಇದನ್ನು ಗಂಭೀರವಾಗಿ ಪರಿಗಣಿಸಿದ ಕೆಸಿಎಫ್ (ಕರ್ನಾಟಕ ಕಲ್ಚರಲ್ ಫೌಂಡೇಶನ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಸುಮಾರು 500 ಕ್ಕೂ ಮಿಕ್ಕ ಅನುಭವೀ ಸ್ವಯಂ ಸೇವಕರನ್ನು ಸಜ್ಜುಗೊಳಿಸಿತ್ತು.ಅರಫಾ, ಮಿನಾ, ಮುಝ್ದಲಿಫಾ ಮತ್ತು ಮಕ್ಕಾ ಮದೀನಾ ಹರಂ ಪರಿಸರದಲ್ಲಿ ಸುಡು ಬಿಸಿಲಿನಲ್ಲೂ, ಬೋರ್ಗೆರೆಯುವ ಮಳೆಯಲ್ಲೂ ಅಲ್ಲಾಹನ ಪ್ರೀತಿಯನ್ನು ಮಾತ್ರ ಮನಗಂಡು ಹಜ್ಜಾಜ್ ಗಳ ಸೇವೆಯಲ್ಲಿ ತೊಡಗಿದ್ದ ತಂಡದ ಪ್ರಮುಖರಾದ, HVC ಪ್ರ.ಕಾರ್ಯದರ್ಶಿ ಇಬ್ರಾಹೀಂ ಕಿನ್ಯಾ, ಫೈಝಲ್ ಕೃಷ್ಣಾಪುರ, ಮುಹಮ್ಮದ್ ಮಲೆಬೆಟ್ಟು, ಹಾಫಿಲ್ ಜಿ.ಎಂ. ಸುಲೈಮಾನ್ ಹನೀಫಿ,ಮೂಸಾ ಹಾಜಿ ಮಕ್ಕಾ, ಝಹೀರ್ ಅಬ್ಬಾಸ್ ಉಳ್ಳಾಲ, ಸಲಾಂ ಪಡ್ಪು,ಎನ್ಮೂರು ಹಾಗೂ ಅಶ್ರಫ್ ಮದೀನಾ ಮುಂತಾದವರೊಂದಿಗೆ ಕೈಜೋಡಿಸಿ ಕಾರ್ಯಾಚರಿಸಿದ ಸ್ವಯಂ ಸೇವಕ ತಂಡದ ಸೇವಾ ಕಾರ್ಯವು ಅತ್ಯಂತ ಶ್ಲಾಘನೀಯ.
ಸ್ವಯಂ ಸೇವಕ ತಂಡದ ಪ್ರಾಮಾಣಿಕ ಸೇವೆಗೆ ಸೌದಿ ಅರೇಬಿಯಾದ ವಿವಿಧ ಪೋಲಿಸ್ ಅಧಿಕಾರಿಗಳಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.ಮಾತ್ರವಲ್ಲದೆ ಈ ಬಾರಿಯೂ ಕೆಸಿಎಫ್ HVC ತಂಡಕ್ಕೆ ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯಿಂದ ಪ್ರಶಂಸೆ ಪತ್ರ ಲಭಿಸಿದೆ.ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್,ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ, ಕೆಸಿಎಫ್ ಐಎನ್ಸಿ ನಾಯಕ ಎನ್ಎಸ್ ಅಬ್ದುಲ್ಲಾ ಹಾಜಿ, ಕೆಸಿಎಫ್ ರಾಷ್ಟ್ರೀಯ ನಾಯಕ ಬಶೀರ್ ತಲಪಾಡಿ ಮುಂತಾದವರ ಸಮ್ಮುಖದಲ್ಲಿ ಪ್ರಶಂಸೆ ಪತ್ರವನ್ನು ಸ್ವೀಕರಿಸಲಾಯಿತು.