ಬೆಂಗಳೂರು: ಆರೋಪ-ಪ್ರತ್ಯಾರೋಪಗಳ ಗದ್ದಲಕ್ಕೆ ಇಂದಿನ ಕಲಾಪ ಬಲಿಯಾಗಿದ್ದರಿಂದ ಸದನವನ್ನು ನಾಳೆಗೆ ಮುಂದೂಡಲಾಯಿತು. ಇದರಿಂದ ಇಂದು ನಡೆಯಬೇಕಿದ್ದ ವಿಶ್ವಾಸಮತ ಯಾಚನೆಯೂ ಮುಂದೂಡಿಕೆಯಾಯಿತು. ಆಡಳಿತ ಪಕ್ಷದವರು ಬೇಕೆಂದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ನಡುವೆ ನಾಳೆ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲ ವಿ.ಆರ್.ವಾಲಾ ಅವರು ಸರ್ಕಾರಕ್ಕೆ ಮತ್ತು ಸ್ಪೀಕರ್ಗೆ ಸೂಚನೆ ನೀಡಿದ್ದಾರೆ.
ಆರ್ಟಿಕಲ್ 175(2)ರ ಪ್ರಕಾರ ನಾಳೆ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತು ಮಾಡುವಂತೆ ಗಡುವು ನಿಗದಿ ಮಾಡಿ ರಾಜ್ಯಪಾಲ ವಿ.ಆರ್.ವಾಲಾ ಅವರು ಸ್ಪೀಕರ್ಗೆ ಸೂಚನೆ ನೀಡಿದ್ದಾರೆ.
ಇಂದು ಸದನದಲ್ಲಿ ಶಾಸಕರು ತಮ್ಮ ಹಕ್ಕುಗಳ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ, ಬಹುಮತ ಸಾಬೀತು ಮಾಡಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿತ್ತು. ಇದೀಗ ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಅಖಾಡಕ್ಕೆ ರಾಜ್ಯಪಾಲರು ದುಮುಕ್ಕಿದ್ದಾರೆ. ನಾಳೆ ಮಧ್ಯಾಹ್ನ 1.30ರೊಳಗೆ ಸರ್ಕಾರ ಬಹುಮತ ಸಾಬೀತು ಮಾಡುವಂತೆ ಗಡುವು ನಿಗದಿ ಮಾಡಿದ್ದಾರೆ.