ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಸರ್ಕಾರವನ್ನು ಉಳಿಸಿಕೊಳ್ಳಲು ರಿವರ್ಸ್ ಆಪರೇಷನ್ ಮಾಡಬಹುದು ಎಂಬ ಭೀತಿ ಬಿಜೆಪಿ ಮುಖಂಡರನ್ನು ಕಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಪದಾಧಿಕಾರಿಗಳು ತಮ್ಮ ಶಾಸಕರನ್ನು ರೆಸಾರ್ಟ್ಗೆ ಸ್ಥಳಾಂತರಿಸುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.
ರಿವರ್ಸ್ ಆಪರೇಷನ್ಗೆ ಒಳಗಾಗುವ ಸಾಧ್ಯತೆ ಇದೆ ಎಂದು 30ಕ್ಕೂ ಹೆಚ್ಚು ಶಾಸಕರನ್ನು ಗುರುತಿಸಲಾಗಿದೆ. ಇವರನ್ನು ಮಾತ್ರವೇ ರೆಸಾರ್ಟ್ಗೆ ಸ್ಥಳಾಂತರಿಸಲಾಗುವುದು. ಭಾನುವಾರ ಸಂಜೆಯೊಳಗೆ ಇವರೆಲ್ಲರನ್ನೂ ಸ್ಥಳಾಂತರಿಸುವ ಸಾಧ್ಯತೆ ಇರುವುದಾಗಿ ಬಿಜೆಪಿ ಮೂಲಗಳು ಹೇಳಿವೆ.
ಶಾಸಕರು ಸ್ವಯಿಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ: ಆರ್. ಅಶೋಕ್
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸ್ವಯಿಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದಾರೆ ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಪುನರುಚ್ಚರಿಸಿದ್ದಾರೆ.
ಶಾಸಕರ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ವಿಷಯ. ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ಕುಮಾರ್ ಅವರ ಕಾರ್ಯವೈಖರಿ ಬಗ್ಗೆ ರಾಜ್ಯದ ಜನರಿಗೆ ತುಂಬಾ ಮೆಚ್ಚುಗೆ ಇದೆ. ಶಾಸಕರ ರಾಜೀನಾಮೆ ವಿಷಯದಲ್ಲೂ ಅವರು ಸರಿಯಾಗಿ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಲ್ಲಿ ಇರುವ ಅತೃಪ್ತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಾಳೆ ಎಷ್ಟು ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬುದೂ ಗೊತ್ತಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಬೆಂಬಲ ಇಲ್ಲದಿದ್ದರೂ ಎರಡೂ ಪಕ್ಷಗಳು ಒಂದಾಗಿ ಸರ್ಕಾರ ರಚಿಸಿದವು. ಅದರ ಪಾಪದ ಫಲವನ್ನು ಉಭಯ ಪಕ್ಷಗಳೂ ಉಣ್ಣಬೇಕಾಗಿ ಬಂದಿದೆ ಎಂದು ಹೇಳಿದರು. (