ನವದೆಹಲಿ: ಸಂಸತ್ತಿನಲ್ಲಿ ಇಂದು ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇತ್ತೀಚಿನ ಸಂದರ್ಶನವೊಂದರಲ್ಲಿ ಆರೀಫ್ ಮೊಹಮ್ಮದ್ ಖಾನ್ ಎಂಬುವವರು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮುಸ್ಲಿಂ ಸುಧಾರಣೆ ಕಾಂಗ್ರೆಸ್ನ ಕೆಲಸವಲ್ಲ. ಅವರು ಮೋರಿಯಲ್ಲಿ ಮಲಗಲು ಬಯಸಿದರೆ, ಮಲಗಲಿ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾಗಿ ತಿಳಿಸಿದ್ದರು ಎಂದು ಮೋದಿ ಸಂದರ್ಶನವನ್ನು ಉಲ್ಲೇಖಿಸಿದ್ದರು.
ಆರೀಫ್ ಮೊಹಮ್ಮದ್ ಖಾನ್ ಅವರು ಶಾ ಬಾನೋ ಪ್ರಕರಣ ಸಂಬಂಧ ಟೆಲಿವಿಷನ್ ಒಂದಕ್ಕೆ ನೀಡಿದ್ದ ಸಂದರ್ಶನವನ್ನು ಪ್ರಧಾನಿ ಮೋದಿ ಉಲ್ಲೇಖಿಸಿ, ಈ ಮಾತು ಹೇಳಿದ್ದರು. ಮೋದಿ ಅವರ ಈ ಮಾತನ್ನು ಕಾಂಗ್ರೆಸ್ ಅಲ್ಲಗಳೆದಿದೆ.
ಸಂದರ್ಶನದಲ್ಲಿ ಮಾತನಾಡಿದ್ದ ಆರೀಫ್ ಖಾನ್, ಮುಸ್ಲಿಮರ ಸುಧಾರಣೆ ಕಾಂಗ್ರೆಸ್ ಪಕ್ಷದ ಕೆಲಸವಲ್ಲ ಎಂದು ಮಾತನಾಡುವಂತೆ ಪಿ.ವಿ.ನರಸಿಂಹರಾವ್, ಅರ್ಜುನ್ ಸಿಂಗ್ ಮತ್ತು ಎನ್.ಡಿ.ತಿವಾರಿ (ಆಗಿನ ಸರ್ಕಾರದಲ್ಲಿ ಸಚಿವರು) ರಾಜೀವ್ ಗಾಂಧಿ ಅವರು ಒತ್ತಡ ಹಾಕಿದ್ದರು. ಅವರು ಮೋರಿಯಲ್ಲಿ ಬದುಕುವುದಾದರೆ ಬದುಕಲಿ ಎಂದು ಹೇಳಿದ್ದಾಗಿ ಸಂದರ್ಶನದಲ್ಲಿ ಹೇಳಿದ್ದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ಜಾಮೀನಿನ ಮೇಲೆ ಇವರು ಹೊರಗೆ ಖುಷಿಯಿಂದ ಇದ್ದಾರೆ. ಸರ್ಕಾರ ತನ್ನ ಜವಾಬ್ದಾರಿ, ಕರ್ತವ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ನಾವು ನೆಲದ ಕಾನೂನನ್ನು ಗೌರವಿಸುತ್ತೇವೆ. ಮತ್ತು ನಮ್ಮ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರೆಯುತ್ತದೆ. ಈಗಾಗಲೇ ಈ ದೇಶ ನಮಗೆ ಸಾಕಷ್ಟನ್ನು ನೀಡಿದೆ. ಅಕ್ರಮವಾಗಿ ಗಳಿಸುವುದು ನಮಗೆ ಬೇಕಿಲ್ಲ ಎಂದು, ಕಾಂಗ್ರೆಸ್ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧುರಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದರು. ಸಂಸತ್ತಿನಲ್ಲಿ ನಿನ್ನೆ ಮಾತನಾಡಿದ ಚೌಧುರಿ ಅವರು ಮೋದಿ ಸರ್ಕಾರ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಜೈಲಿಗೆ ಕಳುಹಿಸಲು ಹೆದರುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.
2 ಜಿ ಹಗರಣ ಮತ್ತು ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಯಾರನ್ನಾದರೂ ಹಿಡಿಯಲು ನಿಮಗೆ ಸಾಧ್ಯವಾಯಿತೆ? ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಕಂಬಿಯ ಹಿಂದೆ ಕಳುಹಿಸಲು ಸಾಧ್ಯವಾಯಿತೆ? ನೀವು ಅವರನ್ನು ಕಳ್ಳರು ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಿರಾ, ಹಾಗಾದರೆ ಅವರು ಏಕೆ ಇಲ್ಲಿ ಕುಳಿತಿದ್ದಾರೆ, ಜೈಲಿನಲ್ಲಿ ಏಕೆ ಇಲ್ಲ ಎಂದು ರಂಜನ್ ಚೌಧುರಿ ಅವರು ಮೋದಿ ವಿರುದ್ಧ ಹರಿಹಾಯ್ದಿದ್ದರು.