ಯಾದಗಿರಿ: ಜನರ ಪಾಲಿಗೆ ರಾಜ್ಯ ಸರ್ಕಾರ ಸತ್ತಾಂಗಿದೆ. ಈ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಜನತೆ ಎದುರು ನೋಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಯಾದಗಿರಿ ಮತಕ್ಷೇತ್ರದ ಅನವಾರ ಗ್ರಾಮದಲ್ಲಿ ಜನರಿಂದ ಅಹವಾಲು ಆಲಿಸಿ ಮಾತನಾಡಿದರು.ಗ್ರಾಮದಲ್ಲಿ ಆರು ತಿಂಗಳಿಂದ ಅಂಗವಿಕಲರಿಗೆ, ವೃದ್ಧರಿಗೆ, ವಿಧವಾ ವೇತನ ನೀಡಿಲ್ಲ. ಹೀಗಾಗಿ ಜನರಿಗೆ ಈ ಸರ್ಕಾರ ಇದ್ದು, ಇಲ್ಲದಂತಾಗಿದೆ ಎಂದರು.ಈ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜನರ ತೆರಿಗೆ ಹಣ ಪೋಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಹಣ ನೀಡಿಲ್ಲ ಎಂದು ದೂರಿದರು.
ವಿಧಾನಸೌಧ ಮುಂದೆ ಧರಣಿ:ಎರಡು ಮೂರು ದಿನಗಳಲ್ಲಿ ವಿಧಾನಸೌಧ ಬಳಿ ಬಿಜೆಪಿ ಸಂಸದರು, ಶಾಸಕರೊಂದಿಗೆ ರಾಜ್ಯ ಸರ್ಕಾರ ವಿರುದ್ಧ ಧರಣಿ ನಡೆಸಲಾಗುವುದು. ತಕ್ಷಣ ರಾಜ್ಯ ಸರ್ಕಾರ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಯಡಿಯೂರಪ್ಪ ಅವರು ಒತ್ತಾಯಿಸಿದರು.ಒಂದು ವರ್ಷ ಕಳೆದರೂ ಸಾಲಮನ್ನಾ ಆಗಿಲ್ಲ. ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.