ನವದೆಹಲಿ.ಮೇ,30: ಇಂದು ಸಂಜೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯದ ಬಿಜೆಪಿ ಸಂಸದರಾದ ಡಿ.ವಿ.ಸದಾನಂದಗೌಡ, ಸುರೇಶ ಅಂಗಡಿ, ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜತೆಗೆ ನಿರ್ಮಲಾ ಸೀತಾರಾಮನ್ ಅವರು ಮತ್ತೊಮ್ಮೆ ಸಚಿವರಾಗಲಿದ್ದಾರೆ. ಅವರು ಕರ್ನಾಟಕದಿಂದ ರಾಜ್ಯಸಭೆಗೆ ಹೋಗಿರುವ ಕಾರಣ, ಕರ್ನಾಟಕಕ್ಕೆ ಒಟ್ಟೂ 4 ಸ್ಥಾನ ಸಿಗಲಿದೆ ಎಂದು ಮೂಲಗಳು ಹೇಳುತ್ತಿವೆ.ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ನಾಯಕರಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಹಿರಿಯರಾದ ಜಿ.ಎಸ್. ಬಸವರಾಜ್, ಶ್ರೀನಿವಾಸ ಪ್ರಸಾದ್, ಮೂರನೇ ಬಾರಿ ಆಯ್ಕೆಯಾಗಿರುವ ಶಿವಕುಮಾರ್ ಉದಾಸಿ, ಮಹಿಳಾ ಕೋಟಾದಡಿ ಶೋಭಾ ಕರಂದ್ಲಾಜೆ ಅವರು ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಮೋದಿ ಪ್ರಮಾಣ ವಚನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ನೂತನ ಪ್ರಧಾನಮಂತ್ರಿ ಅವರೊಂದಿಗೆ ರಾಜ್ಯ ನಾಲ್ವರು ಸಂಸದರೂ ಸೇರಿದಂತೆ 50 ರಿಂದ 60 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಿರಿಯ ಮುಖಂಡರಾದ ರಾಜನಾಥ್ ಸಿಂಗ್ ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯೆಲ್, ಪ್ರಕಾಶ್ ಜಾವ್ಡೇಕರ್, ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಅಗ್ರಮಾನ್ಯರು ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
ಅನಾರೋಗ್ಯದ ಕಾರಣ ಸಚಿವರಾಗಲು ನಿರಾಕರಿಸಿರುವ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ಮನವೊಲಿಸಲು ಮೋದಿ ಮತ್ತು ಅಮಿತ್ ಶಾ ಮಧ್ಯಾಹ್ನದವರೆಗೂ ಯತ್ನಿಸಿದರು. ಕರ್ನಾಟಕದಿಂದ ಡಿ..ಸದಾನಂದಗೌಡ, .ಶ್ರೀನಿವಾಸ ಪ್ರಸಾದ್, ಸುರೇಶ್ ಅಂಗಡಿ ಮತ್ತು ಪ್ರಹ್ಲಾದ್ ಜೋಷಿ ಸ್ಥಾನ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೋದಿ ಮಂತ್ರಿ ಮಂಡಲದ ಸಂಭಾವ್ಯ ಸಚಿವರ ಪಟ್ಟಿ :
ಅಮಿತ್ ಷಾ, ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಡಿ.ವಿ.ಸದಾನಂದ ಗೌಡ, ಸುರೇಶ್ ಅಂಗಡಿ, ಪ್ರಹ್ಲಾದ್ ಜೋಷಿ, ಬಾಬುಲ್ ಸುಪ್ರಿಯೋ, ರಾಮ್ವಿಲಾಸ್ ಪಾಸ್ವಾನ್, ಪಿಯೂಷ್ ಗೋಯೆಲ್, ಮುಕ್ತಾರ್ ಅಬ್ಬಾಸ್ ನಕ್ವಿ, ಪುರುಷೋತ್ತಮ್ ರೂಪಾಲ್, ಆರ್.ಕೆ.ಸಿಂಗ್, ಅರ್ಜುನ್ ಮೇಘ್ವಾಲ್, ಕಿರಣ್ ರಿಜುಜು, ಸಾಧ್ವಿ ನಿರಂಜನ್ ಜ್ಯೋತಿ, ಪ್ರಹ್ಲಾದ್ ಪಟೇಲ್, ರಾಮದಾಸ್ ಅಟವಾಳೆ, ಜಿತೇಂದ್ರ ಸಿಂಗ್, ಹರ್ ಸಿಮ್ರತ್ ಕೌರ್, ಸಂಶೋಷ್ ಗಂಗ್ವಾರ್, ಕಿಶನ್ ಪಾಲ್ ಗುರ್ಜರ್, ನಿತ್ಯಾನಂದ ರಾಯ್, ರಾವ್ ಇಂದ್ರಜಿತ್, ಕಿಶನ್ ರೆಡ್ಡಿ, ನರೇಂದ್ರಸಿಂಗ್ ತೋಮರ್