ಮಂಗಳೂರು: ಕರಾವಳಿಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ತಾ ಇದ್ದು, ಜಿಲ್ಲೆಯ ಪ್ರಮುಖ ಜೀವನದಿಯಾದ ನೇತ್ರಾವತಿ ಬತ್ತಿ ಹೋಗಿದೆ. ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆ ಬರವಾಗಿದೆ. ಇದರ ನಡುವೆ ನೀರಿನ ಬರ ಹೋಟೆಲ್ ಉದ್ಯಮದ ಮೇಲೂ ಬೀರಿದೆ. ನೀರಿಲ್ಲದ ಕಾರಣ ಜಿಲ್ಲೆಯ ಕೆಲವು ಹೋಟೆಲ್ ಗಳಲ್ಲಿ ಊಟದ ವ್ಯವಸ್ಥೆಯನ್ನೇ ರದ್ದು ಮಾಡಲಾಗಿದೆ.
ಇನ್ನು ಕೆಲವು ಹೋಟೆಲ್ ಗಳಲ್ಲಿ ಸ್ಟೀಲ್ ಲೋಟ,ತಟ್ಟೆಗಳ ಬದಲು ಪ್ಲಾಸ್ಟಿಕ್ ಹಾಗೂ ಪೇಪರ್ ಲೋಟ ತಟ್ಟೆಯನ್ನ ಬಳಸ್ತಾ ಇದ್ದಾರೆ. ಪ್ಲೇಟ್ ತೊಳೆಯಲು ನೀರಿಲ್ಲ ಎನ್ನುವ ಅಸಹಾಯಕತೆಯನ್ನೂ ವ್ಯಕ್ತಪಡಿಸಿವೆ. ಇನ್ನು ಜಿಲ್ಲೆಯ ಪ್ರಮುಖ ಜೀವನದಿಯಾದ ನೇತ್ರಾವತಿಯಲ್ಲಿ ನೀರಿನ ಸೆಲೆ ಸಂಪೂರ್ಣ ಕ್ಷೀಣಿಸಿದೆ.
ಎತ್ತಿನಹೊಳೆ ಯೋಜನೆಗಾಗಿ ಒಂದೆಡೆ ಪಶ್ವಿಮಘಟ್ಟಗಳ ಅರಣ್ಯಗಳ ಮಾರಣಹೋಮ ನಡೆದರೆ, ಇನ್ನೊಂದೆಡೆ ಅರಣ್ಯ ಪ್ರದೇಶಗಳಲ್ಲಿ ಜಲ ವಿದ್ಯುತ್ ಘಟಕಗಳಂತಹ ಯೋಜನೆಗಳು ತಲೆ ಎತ್ತುತ್ತಿರುವುದು ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ನೀರಿನ ಕ್ಷಾಮ ಉಂಟಾಗಲು ಪ್ರಮುಖ ಕಾರಣ ಎನ್ನಲಾಗಿದೆ. ಮಂಗಳೂರು ನಗರಕ್ಕೆ ಇದೀಗ ವಾರಕ್ಕೆ ಎರಡು ದಿನ ಮಾತ್ರ ನೀರು ಪೂರೈಸುವ ಸ್ಥಿತಿಯಲ್ಲಿ ಜಿಲ್ಲಾಡಳಿತವಿದೆ.