janadhvani

Kannada Online News Paper

13,500 ಕೋಟಿ ರೂ ವಂಚಿಸಿದ ಆರೋಪಿ ನೀರವ್ ಮೋದಿಗೆ ಜಾಮೀನಿಲ್ಲ

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ 13,500 ಕೋಟಿ ರೂ. ಹಗರಣದ ಆರೋಪಿ ನೀರವ್ ಮೋದಿ, ಪ್ರಕರಣದ ಒಬ್ಬ ಸಾಕ್ಷಿಗೆ ಕೊಲೆಬೆದರಿಕೆಯೊಡ್ಡಿ, ಇನ್ನೊಬ್ಬರನ್ನು ಹಣದ ಆಮಿಷವೊಡ್ಡಿ ಕೊಂಡುಕೊಳ್ಳುವ ಯತ್ನ ಮಾಡಿದ್ದಾರೆ ಎಂದು ಇಂಗ್ಲೆಂಡ್ನ ಪ್ರಾಸಿಕ್ಯೂಟರ್ ವೆಸ್ಟ್ಮಿನಿಸ್ಟರ್ ನ್ಯಾಯಾಲಯದಲ್ಲಿ ಮಾಡಿದ್ದಾರೆ.

ನೀರವ್ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಇಂಗ್ಲೆಂಡ್ನ ಕ್ರೌನ್ ಪ್ರಾಸಿಕ್ಯೂಷನ್ ಸೇವಾ ಸಂಸ್ಥೆಯ ಟಾಬಿ ಕ್ಯಾಡ್ಮ್ಯಾನ್ ಭಾರತದ ಪರವಾಗಿ ವಾದ ಮಂಡಿಸುತ್ತಿದ್ದು, ನೀರವ್ ಮೋದಿ ಕೆಲವೊಂದು ಸಾಕ್ಷಿಗಳನ್ನು ಈಗಾಗಲೇ ನಾಶಪಡಿಸಿದ್ದಾಗಿ ಹೇಳಿದರು.
“ನೀರವ್ ಮೋದಿ ಮೇಲಿರುವ ಗಂಭೀರ ಆರೋಪಗಳಿಗೆ ತಕ್ಕ ಸಾಕ್ಷಿಗಳಿವೆ ಮತ್ತು ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಪುರಾವೆಗಳನ್ನು ತಿರುಚುವ ಸಾಧ್ಯತೆಇದೆ. ಈ ಕಾರಣದಿಂದ ಅವರಿಗೆ ಜಾಮೀನು ನೀಡಬೇಡಿ,” ಎಂದು ಟಾಬಿ ಕ್ಯಾಡ್ಮ್ಯಾನ್ ಕೋರ್ಟ್ಗೆ ತಿಳಿಸಿದರು.
ಮುಂದುವರೆದ ಅವರು, ನೀರವ್ ಮೋದಿ ದೇಶ ಬಿಟ್ಟು ಓಡಿಹೋಗುವ ಆತುರದಲ್ಲಿದ್ದಾರೆ ಎಂಬುದು ಕೂಡ ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ. “ಕೋಟ್ಯಾಂತರ ರೂಪಾಯಿ ಮೌಲ್ಯದ ಡೈಮಂಡ್, ಚಿನ್ನ ಮತ್ತು ಮುತ್ತುರತ್ನಗಳು ನೀರವ್ ಮೋದಿ ಬಳಿ ಇವೆ. ವಿಚಾರಣೆ ವೇಳೆ ಪೊಲೀಸರಿಗೆ ಮೋದಿ ಎಂದೂ ಸಹಕಾರ ನೀಡಿಲ್ಲ. ನೀರವ್ ಮೋದಿಗೆ ಜಾಮೀನು ನೀಡಲೇಬಾರದು,” ಎಂದು ಕ್ಯಾಡ್ಮ್ಯಾನ್ ವಾದ ಮಂಡಿಸಿದರು.
ವಿಚಾರಣೆಯ ಆರಂಭಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಸಾಕ್ಷಿಗಳನ್ನು ಕೋರ್ಟ್ಗೆ ಸಲ್ಲಿಕೆ ಮಾಡಲಾಗಿತ್ತು. ವಾದ ಪ್ರತಿವಾದಗಳನ್ನು ಆಲಿಸಿದ ನಂತರ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ವೆಸ್ಟ್ಮಿನಿಸ್ಟರ್ ನ್ಯಾಯಾಲಯ ತಿರಸ್ಕರಿಸಿದೆ. ಈ ಹಿಂದೆ ವಿಜಯ್ ಮಲ್ಯಾರ ಹಸ್ತಾಂತರ ಪ್ರಕ್ರಿಯೆಗೆ ಅವಕಾಶ ನೀಡಿದ್ದ ನ್ಯಾಯಾಧೀಶರೇ ಈ ಪ್ರಕರಣವನ್ನೂ ಆಲಿಸುತ್ತಿದ್ದಾರೆ.

error: Content is protected !! Not allowed copy content from janadhvani.com