janadhvani

Kannada Online News Paper

ಭಾರತ ಮತ್ತು ಪಾಕಿಸ್ತಾನ ಒಗ್ಗಟ್ಟಾದರೆ ಉತ್ತಮ- ಟ್ರಂಪ್

ನವದೆಹಲಿ (ಫೆ. 20): ಕಾಶ್ಮೀರ ಕಣಿವೆಯ ಪುಲ್ವಾಮಾದಲ್ಲಿ 6 ದಿನಗಳ ಹಿಂದೆ ಸಿಆರ್​ಪಿಎಫ್​ ಯೋಧರನ್ನು ಕರೆದೊಯ್ಯುತ್ತಿದ್ದ ಬಸ್​ನ ಮೇಲೆ ಜೈಷ್​-ಇ-ಮೊಹಮ್ಮದ್​ ತಂಡದವರು ನಡೆಸಿದ ಭೀಕರ ಆತ್ಮಾಹುತಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇದೊಂದು ಭಯಾನಕ ಘಟನೆ ಎಂದು ಹೇಳಿದ್ದಾರೆ.

ನಾವು ಸದ್ಯದಲ್ಲೇ ಈ ಘಟನೆ ಬಗ್ಗೆ ವರದಿ ತರಿಸಿಕೊಂಡು ಅಧಿಕೃತ ಹೇಳಿಕೆಯನ್ನು ನೀಡುಲಿದ್ದೇವೆ ಎಂದು ಹೇಳಿರುವ ಡೊನಾಲ್ಡ್​ ಟ್ರಂಪ್, ನಾನು ಎಲ್ಲವನ್ನೂ ಗಮನಿಸಿದ್ದೇನೆ. ಇದುವರೆಗೂ ಈ ಘಟನೆ ಬಗ್ಗೆ ಸಾಕಷ್ಟು ಮಾಹಿತಿಗಳು ನನಗೆ ಸಿಕ್ಕಿವೆ. ಸದ್ಯದಲ್ಲೇ ಇದರ ಬಗ್ಗೆ ನಾವು ಹೇಳಿಕೆ ನೀಡಲಿದ್ದೇವೆ. ಇನ್ನಾದರೂ ಭಾರತ ಮತ್ತು ಪಾಕಿಸ್ತಾನ ದ್ವೇಷ ತೊರೆದು ಒಗ್ಗಟ್ಟಾದರೆ ಉತ್ತಮ ಎಂದು ಟ್ರಂಪ್ ಹೇಳಿದ್ದಾರೆ.

ಇನ್ನು, ಪುಲ್ವಾಮಾ ದಾಳಿಯ ಬಗ್ಗೆ ರಾಜ್ಯ ಇಲಾಖೆಯ ವಕ್ತಾರ ರಾಬರ್ಟ್​ ಪಲಾಡಿನೋ ಕೂಡ ಪ್ರತಿಕ್ರಿಯೆ ನೀಡಿದ್ದು, ಪುಲ್ವಾಮಾ ಮೇಲೆ ಬಾಂಬ್​ ದಾಳಿ ನಡೆಸಿ 40 ಯೋಧರನ್ನು ಹತ್ಯೆಗೈದಿರುವುದು ದೊಡ್ಡ ದುರಂತ. ನಾವು ಭಾರತಕ್ಕೆ ಬೆಂಬಲ ನೀಡುತ್ತೇವೆ. ಈ ದುರಂತಕ್ಕೆ ಯಾರು ಕಾರಣರೋ ಅವರಿಗೆ ಶಿಕ್ಷೆಯಾಗಲೇಬೇಕು. ಅಮೆರಿಕ ಸರ್ಕಾರ ಭಾರತದ ಜೊತೆಗೆ ಮಾತುಕತೆ ನಡೆಸಿದೆ. ಭಾರತೀಯ ಯೋಧರ ದುರ್ಮರಣಕ್ಕೆ ಸಂತಾಪ ಸೂಚಿಸುವುದಷ್ಟೇ ನಮ್ಮ ಮಾತುಕತೆಯ ಉದ್ದೇಶವಲ್ಲ. ನಾವು ನಿಮಗೆ ಎಲ್ಲ ರೀತಿಯ ಬೆಂಬಲ ನೀಡಲಿದ್ದೇವೆ ಎಂದು ಭಾರತ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

error: Content is protected !! Not allowed copy content from janadhvani.com