ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮನೆಯ ಸ್ಥಿರ ದೂರವಾಣಿಗೆ ಶುಕ್ರವಾರ ರಾತ್ರಿ ಜೀವ ಬೆದರಿಕೆ ಕರೆ ಬಂದಿದೆ. ರಾತ್ರಿ 1.45ರ ಸುಮಾರಿಗೆ ಸಚಿವರ ಮನೆ ಸ್ಥಿರ ದೂರವಾಣಿಗೆ 0022330000 ಈ ನಂಬರ್ನಿಂದ ಅನಾಮಿಕ ಕರೆ ಬಂದಿದೆ.
‘ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡು ಇರಬೇಕು. ಮುಸ್ಲಿಮರ ಬಗ್ಗೆ ಮಾತನಾಡಿದರೆ ನಿಮ್ಮನ್ನು, ನಿಮ್ಮ ಕುಟುಂಬವನ್ನು ಬಿಡುವುದಿಲ್ಲ. ಜೀವ ತೆಗಯುತ್ತೇವೆ. ಅಯೋಧ್ಯೆಯು ನಿಮಗೆ ಬೇಕಾ? ಅದನ್ನು ಬಿಡುವುದಿಲ್ಲ. ನಿಮ್ಮ ಜೀವ ತೆಗೆಯುತ್ತೇವೆ’ ಎಂದು ಕರೆ ಮಾಡಿದವರು ಹೇಳಿದ್ದಾರೆ.
ಸಚಿವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಹೋಗಿದ್ದರು. ಹೀಗಾಗಿ ಅವರ ಪತ್ನಿ ರೂಪಾ ಹೆಗಡೆ ಕರೆ ಸ್ವೀಕರಿಸಿದ್ದರು. ಕರೆ ಮಾಡಿದವರು ಅವಾಚ್ಯ ಶಬ್ದಗಳಿಂದ ಬೈಯತೊಡಗಿದಾಗ ರೂಪಾ ಹೆಗಡೆ ಫೋನ್ ಕಟ್ ಮಾಡಿದ್ದಾರೆ. ನಂತರ ಹಲವು ಬಾರಿ ಕರೆ ಇದೇ ಸಂಖ್ಯೆಯಿಂದ ಕರೆಗಳು ಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಸಚಿವರ ಆಪ್ತ ಸಹಾಯಕ ಸುರೇಶ ಶೆಟ್ಟಿ ಭಾನುವಾರ ತಡರಾತ್ರಿ ಪ್ರಕರಣ ದಾಖಲಿಸಿದ್ದಾರೆ.