ಮಾಷಿತ ಪಿ ಕಲ್ಲೇರಿ ಪ್ರಥಮ, ಬಿ.ಎಂ ಝಿಯಾದ್ ಬೈರಿಕಟ್ಟೆ ದ್ವಿತೀಯ, ಆಯಿಷಾ ಶಮೀಮ ತೃತೀಯ
ಯುಎಇ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ಪಬ್ಲಿಕೇಷನ್ ವಿಭಾಗದ ವತಿಯಿಂದ ಗಲ್ಫ್ ಇಶಾರಾ ಮೂರನೇ ವರ್ಷದ ಪ್ರಯುಕ್ತ “ಸಹಿಷ್ಣುತೆಯ ವರ್ಷ 2019” ಎಂಬ ವಿಷಯದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಟ್ಟದ ಸಾರ್ವಜನಿಕ ಪ್ರಬಂಧ ಸ್ಪರ್ಧೆಯಲ್ಲಿ ಮಾಷಿತ. ಪಿ ಕಲ್ಲೇರಿ ಉಪ್ಪಿನಂಗಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಝಿಯಾದ್ ಬಿ.ಎಂ ಬೈರಿಕಟ್ಟೆ ದ್ವಿತೀಯ ಹಾಗೂ ಆಯಿಷಾ ಶಮೀಮಾ ಸಂಪ್ಯ ಪುತ್ತೂರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕೆ.ಸಿ.ಎಫ್ ಡೇ ಪ್ರಯುಕ್ತ ಕೆ.ಸಿ.ಎಫ್ ನ್ಯಾಷನಲ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿರವರ ಅಧ್ಯಕ್ಷತೆಯಲ್ಲಿ ಶಾರ್ಜಾದಲ್ಲಿ ನಡೆದ ಪ್ರತಿನಿಧಿ ಸಮಾವೇಶದಲ್ಲಿ ಕೆಸಿಎಫ್ ನ್ಯಾಷನಲ್ ಸೆಕ್ರೆಟರಿ ಇಕ್ಬಾಲ್ ಕಾಜೂರ್ ಫಲಿತಾಂಶ ಘೋಷಿಸಿದರು. ತಾಜುಲ್ ಫುಕಹಾಅ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಗಣ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಬ್ದುಲ್ ಲತೀಫ್ ಕಲ್ಲೇರಿರವರ ಪುತ್ರಿಯಾಗಿರುವ ಮಾಷಿತ ಪಿ ಉಪ್ಪಿನಂಗಡಿ ಜೂನಿಯರ್ ಕಾಲೇಜು ಬಿ.ಯಸ್.ಸಿ ದ್ವಿತೀಯ ವರ್ಷದ ವಿಧ್ಯಾರ್ಥಿನಿಯಾಗಿದ್ದಾರೆ. ದ್ವಿತೀಯ ಸ್ಥಾನ ವಿಜೇತರಾದ ಬಿ.ಯಂ ಝಿಯಾದ್ ಸೌದಿ ಅರೇಬಿಯಾದ ಪ್ರತಿಷ್ಠಿತ ಸಂಸ್ಥೆಯಲ್ಲಿ ಆಡ್ಮಿನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತೃತೀಯ ಸ್ಥಾನಿ ಆಯಿಷತುಲ್ ಶಮೀಮ ಕೆ.ವಿ.ಜೆ ಡೆಂಟಲ್ ಕಾಲೇಜು BDS ವಿಭಾಗದ ದ್ವಿತೀಯ ವರ್ಷದ ವಿಧ್ಯಾರ್ಥಿನಿಯಾಗಿದ್ದಾರೆ.
ಯು.ಎ.ಇ ಪಿತಾಮಹ ಶೈಖ್ ಝಾಯೆದ್ ಅಲ್ ನಹ್ಯಾನ್ ರವರು ಸಹಿಷ್ಣುತೆಯ ಪ್ರತಿಪಾದಕರಾಗಿದ್ದರು. ಅವರ ಸಹಿಷ್ಣುತೆಯ ಹೋರಾಟದ ಭಾಗವಾಗಿ ಯು.ಎ.ಇ ಸರಕಾರ ಡಿಸೆಂಬರ್ 15 ರಂದು ಇಯರ್ ಒಫ್ ಟಾಲರನ್ಸ್ ಎಂಬ ಘೋಷಣೆಯಡಿಯಲ್ಲಿ ಜಾಗತಿಕ ಮಟ್ಟದಲ್ಲಿ ಸಹಿಷ್ಣುತೆಯ ಸಂದೇಶವನ್ನು ಸಾರುವ ಮಹತ್ವದ ಯೋಜನೆಯೊಂದನ್ನು ಘೋಷಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಿಷ್ಣುತೆಯ ಬಗ್ಗೆ ಅರಿವನ್ನು ಮೂಡಿಸಿ ಸಧೃಡ ಸಮಾಜವನ್ನು ಕಟ್ಟಿ ಬೆಳೆಸುವುದೇ ಈ ಅಭಿಯಾನದ ಉದ್ದೇಶವಾಗಿರುತ್ತದೆ. ಪ್ರಸ್ತುತ ಅಭಿಯಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ಪಬ್ಲಿಕೇಷನ್ ವಿಭಾಗ ಅಂತಾರಾಷ್ಟ್ರೀಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಡಿಸೆಂಬರ್ 25 ರಂದು ಘೋಷಿಸಿತ್ತು.