ಬೆಂಗಳೂರು: ಶಾಸಕರು ಖರೀದಿಗೆ ಇರುವ ವಸ್ತುಗಳು ಅಂತ ಎಲ್ಲರಿಗೂ ಭಾವನೆ ಬಂದುಬಿಟ್ಟಿದೆ. ಇಂತಹ ಭಾವನೆ ಅಪಾಯಕರ. ಶಾಸಕರ ಖರೀದಿ ಶಾಶ್ವತವಾಗಿ ನಿಲ್ಲುವಂತಾಗಬೇಕು. ಅದಕ್ಕಾಗಿಯೇ ಆಡಿಯೊ ಪ್ರಕರಣವನ್ನು ಎಸ್ಐಟಿಗೆ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಟಿಗೆ ಪ್ರಾಮಾಣಿಕ ಅಧಿಕಾರಿಗಳ ನೇಮಕ ಮಾಡಲಾಗುವುದು ಎಂದು ಹೇಳಿದರು.
ಪ್ರಾಮಾಣಿಕ ಅಧಿಕಾರಿಗಳಿಂದ ಆಡಿಯೊ ಪ್ರಕರಣದ ತನಿಖೆ ನಡೆಯಲಿದೆ. ಅಧಿಕಾರಿಗಳು ಯಾರದ್ದೇ ಪ್ರಭಾವಕ್ಕೂ ಒಳಗಾಗಬೇಡಿ ಎಂದು ಸೂಚಿಸುತ್ತೇನೆ. ಸ್ವತಃ ಮುಖ್ಯಮಂತ್ರಿ ಆಗಿರುವ ನನ್ನ ಪ್ರಭಾವಕ್ಕೂ ಅಧಿಕಾರಿಗಳು ಒಳಗಾಗಲ್ಲ ಎಂದರು.
ರಾಜ್ಯದಲ್ಲಿ ಶಾಸಕರ ಖರೀದಿ ಪ್ರಕರಣಗಳು ಮರುಕಳಿಸದಂತೆ ತನಿಖೆ ಮಾಡಲು ಸೂಚಿಸುತ್ತೇನೆ ಎಂದು ಸಿಎಂ ಹೇಳಿದರು.