ನವದೆಹಲಿ: ಕೋಲ್ಕತಾ ಪೋಲಿಸ್ ಆಯುಕ್ತರ ವಿರುದ್ಧ ಸಿಬಿಐನ ತನಿಖೆ ನಡೆಸುವ ವಿಚಾರವಾಗಿ ನೀಡಿರುವ ಸುಪ್ರೀಂ ತೀರ್ಪಿಗೆ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಶ್ಲಾಘಿಸಿದ್ದಾರೆ.
ಸುಪ್ರೀಂ ತೀರ್ಪಿನ ನಂತರ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜೀ ” ಸುಪ್ರೀಂಕೋರ್ಟ್ ರಾಜೀವ್ ಕುಮಾರ್ ವಿರುದ್ದ ಯಾವುದೇ ಒತ್ತಡದ ಕ್ರಮಗಳನ್ನು ತೆಗೆದುಕೊಳ್ಳುವ ಹಾಗಿಲ್ಲ ಎಂದು ತೀರ್ಪು ನೀಡಿದೆ. ಇದು ನಿಜಕ್ಕೂ ಭಾರತದ ಜನತೆಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು, ಮತ್ತು ನಮ್ಮೆಲ್ಲರನ್ನೂ ಬೆಂಬಲಿಸಿದವರಿಗೆ ದೊರೆತ ಗೆಲುವು ಕೂಡ ಹೌದು.ನಮಗೆ ನ್ಯಾಯಾಂಗದ ಮೇಲೆ ಮತ್ತು ಎಲ್ಲ ಸಂಸ್ಥೆಗಳ ಮೇಲೆ ನಂಬಿಕೆ ಇದೆ, ನಾವು ಅದಕ್ಕೆ ಅಭಾರಿಯಾಗಿದ್ದೇವೆ” ಎಂದು ತಿಳಿಸಿದರು.
ಇದೇ ವೇಳೆ ಕೋಲ್ಕತ್ತಾ ಪೋಲಿಸ್ ಕಮಿಷನರ್ ಪರ ಬ್ಯಾಟಿಂಗ್ ಮಾಡಿದ ಮಮತಾ ಬ್ಯಾನರ್ಜೀ ಅವರು ಎಂದಿಗೂ ಕೂಡ ಶಾರಧಾ ಹಾಗೂ ಇತರ ಹಗರಣಗಳಲ್ಲಿ ಸಿಬಿಐ ನಡೆಸುತ್ತಿರುವ ತನಿಖೆಗೆ ಸಹಕಾರ ನೀಡುವುದಿಲ್ಲವೆಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜೀ ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಎದುರಾಳಿಗಳ ವಿರುದ್ದ ಮೇಲುಗೈ ಸಾಧಿಸಲು ದೇಶದ ಪ್ರಮುಖ ಸಂಸ್ಥೆಗಳನ್ನು ನಾಶಪಡಿಸಿದ್ದಾರೆ ಎಂದು ಕಿಡಿ ಕಾರಿದರು.